Tuesday, August 20, 2024

 ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನ 2024 - 

ವೈಜ್ಞಾನಿಕ ಸಮಗ್ರತೆ ಮತ್ತು ತಡೆರಹಿತ ತರ್ಕಬದ್ಧ ವಿಚಾರ

- ರವೀಂದ್ರ ರುದ್ರವಾಡಿ


ಇತ್ತೀಚೆಗೆ ಮುಂಬಯಿಯ ಟಾಟಾ ಸಮಾಜ ವಿಜ್ಞಾನಗಳ ಸಂಸ್ಥೆಯು(TISS) ‘ಪ್ರೊಗ್ರೆಸ್ಸಿವ್ ಸ್ಟೂಡೆಂಟ್ ಫೋರಂ’ನ್ನು ನಿಷೇಧಿಸಿದೆಯಂತೆ. ಕೇವಲ ಟಾಟಾ ಸಂಸ್ಥೆಗಷ್ಟೇ ಅಲ್ಲ; ಭಾರತದ ಬಹುತೇಕ ಸಂಸ್ಥೆ, ವಿದ್ಯಾಕೇಂದ್ರಗಳಿಗೆ ಈ ಪ್ರಗತಿಪರ ಎನ್ನುವ ಪದ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಪ್ರಗತಿಪರ ಎಂದರೇನು? ಯಾರು ಪ್ರಗತಿಪರರು? ನಾವು ಪ್ರಗತಿಪರವಾಗಿರಬೇಕೋ ? ವಿರುದ್ಧವಾಗಿರಬೇಕೋ ? ಎಂಬ ಕುರಿತು ಗೊಂದಲ ಸೃಷ್ಟಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಪ್ರಗತಿಯನ್ನು ವಿರೋಧಿಸುವ, ಪ್ರಗತಿಪರತೆ ಮತ್ತು ಪ್ರಗತಿಪರರನ್ನು ವಿರೋಧಿಸುವ ಅಂಧಾನುಕರಣ ಮನಃಸ್ಥಿತಿ ಬೇರೂರುತ್ತಿದೆ. ಇಂಥ ಜಡ್ಡುಗಟ್ಟಿದ ಮನಃಸ್ಥಿತಿಯೇ ಭಾರತವನ್ನು ಮೇಲೇಳಲು ಬಿಡುತ್ತಿಲ್ಲ. ವ್ಯವಸ್ಥೆಯ ಕುರಿತು ಕಾಳಜಿ ಹೊಂದಿರುವ, ವ್ಯವಸ್ಥೆಯ ಸುಧಾರಣೆಗಾಗಿ ಯೋಚಿಸುವ ಮತ್ತು ಪ್ರಯತ್ನಿಸುವ ಮನಃಸ್ಥಿತಿಯ ಪ್ರಗತಿಪರತೆ ಅಂಧಾನುಯಾಯಿಗಳಿಗೆ ಬೇಕಿಲ್ಲ. ಈಗಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲಾಭಗಳನ್ನು ಪಡೆಯುತ್ತಿರುವ ಇಂಥ ದುಷ್ಟ ಮನಃಸ್ಥಿತಿಯು ಇದನ್ನು ಯಥಾವತ್ತಾಗಿ ಮುಂದುವರೆಸುವ ಮತ್ತು ಸಾಧ್ಯವಾದರೆ ಇನ್ನಷ್ಟು ಅಸಮಾನ ಲಾಭ ಪಡೆಯುವ ನಿಟ್ಟಿನಲ್ಲಿ ಒಟ್ಟು ವ್ಯವಸ್ಥೆಯನ್ನು ಅಧಃಪತನದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತದೆ. ಇಲ್ಲಿ ವೈಯಕ್ತಿಕ ಮತ್ತು ಅಸಮಾನ ಲಾಭದ ಉದ್ಧೇಶವಿರುತ್ತದೆಯೇ ಹೊರತು ಸಾಮುದಾಯಿಕ ಮತ್ತು ಸಮಾನ ನ್ಯಾಯದ ಪ್ರತಿಪಾದನೆಯಿರುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಪ್ರಗತಿಪರತೆಯು ಒಟ್ಟು ಸಮಾಜದ ಏಳಿಗೆಯನ್ನು ಬಯಸುವ, ಎಲ್ಲರಿಗೂ ಒಳಿತನ್ನು ಬಯಸುವ ಮನಃಸ್ಥಿತಿ. ಇಂಥ ಪ್ರಗತಿಪರತೆಯನ್ನು ವಿರೋಧಿಸುವುದೆಂದರೆ ತಮ್ಮ ಅಸ್ತಿತ್ವವನ್ನು ತಾವೇ ಅಲ್ಲಗಳೆದಂತೆ.


ಇಡೀ ರಾಷ್ಟ್ರದಲ್ಲಿ ಆಗಷ್ಟ್ 20 ರಂದು ಸದ್ಭಾವನಾ ದಿನವೆಂದು ಆಚರಿಸಲಾಗುತ್ತಿದೆ. ಶಾಲೆ-ಕಾಲೇಜು, ಕಛೇರಿಗಳಲ್ಲಿ ತೋರಿಕೆಗೆ ಸದ್ಭಾವನಾ ಪ್ರತಿಜ್ಞೆಯನ್ನು ಮೊಳಗಿಸುತ್ತ ಮನದಲ್ಲಿ ಮತ್ತದೇ ಅಸಹನೆಯ ವಿಕಾರತೆಯನ್ನು ತುಂಬಿಕೊಳ್ಳುವುದು ಉತ್ಪ್ರೇಕ್ಷೆಯಲ್ಲವೇ. ಇಂದು ರಾಷ್ಟ್ರೀಯ ಸದ್ಭಾವನಾ ದಿನವನ್ನಾಗಿ ಕರೆಕೊಟ್ಟಿರುವುದರ ಹಿನ್ನೆಲೆ - ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ರಾಜೀವ ಗಾಂಧಿಯವರ ಹತ್ಯೆ. ಇದೇ ದಿನ ದುರ್ಭಾವನೆಯಿಂದ ರಾಷ್ಟ್ರೀಯತಾವಾದಿ, ಪ್ರಗತಿಪರ ಚಿಂತಕ ಡಾ. ನರೇಂದ್ರ ದಾಬೋಲ್ಕರ್ ಅವರನ್ನೂ ಹತ್ಯೆ ಮಾಡಲಾಗಿತ್ತು. ರಾಜೀವ್ ಗಾಂಧಿ ಹಾಗೂ ದಾಬೋಲ್ಕರ್ ಹತ್ಯೆಯಾದ ದಿನವನ್ನೇ ಇಂಥ ಆಚರಣೆಗೆ ಕರೆಕೊಟ್ಟಿದ್ದು ಹತ್ಯೆಯ ಹಿಂದಿನ ಅಸಹಿಷ್ಣುತೆ, ಧರ್ಮಾಂಧ ವಿಕೃತಿ, ದುರ್ಭಾವನೆಯನ್ನು ಖಂಡಿಸಲು. ಇಡೀ ಭಾರತವೇ ಸದ್ಭಾವನೆಯಲ್ಲಿ ಇಂದು ಮಿಂದೇಳುತ್ತದೆ. ಸದ್ಭಾವನೆಯೆಂಬುದು ಇದೊಂದೇ ದಿನಕ್ಕೆ ಸೀಮಿತವಾಗಿಲ್ಲ; ಆದರೂ ಇದೊಂದು ದಿನವಾದರೂ ಸದ್ಭಾವನೆಗಳು ಹೃದಯಕ್ಕಿಳಿದರೆ ಸಾರ್ಥಕ! ನೋಡೋಣ. ಸದ್ಭಾವನೆಯೆಂಬುದು ವ್ಯಕ್ತಿಯಲ್ಲಿ ಶಾಶ್ವತವಾಗಿ ನೆಲೆಸಲಿ ಎಂದು ಆಶೀಸೋಣ. 


ಇಂದು ‘ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನ’ವೂ(NSTD) ಹೌದು. 2013 ರಲ್ಲಿ ಆಗಷ್ಟ 20ರಂದು ದಕ್ಷಿಣ ಭಾರತದ ಹೆಸರಾಂತ ಜನ ವಿಜ್ಞಾನ ಚಳುವಳಿಗಾರ, ವಿಚಾರವಾದಿ, ಜನ ವೈದ್ಯ, ಮಹಾರಾಷ್ಟ್ರದ ಡಾ.ನರೆಂದ್ರ ದಾಬೋಲ್ಕರ್ ಎಂಬ ಭಾರತೀಪುತ್ರನನ್ನು ಧರ್ಮಾಂಧರು ಹತ್ಯೆಗೈದು ವಿಕೃತಿ ಮೆರೆದ ದಿನ. ಪುರಾವೆಯಿಲ್ಲದೇ ಏನನ್ನೂ ನಂಬದಿರಿ ಎಂದು ತಾರ್ಕಿಕ ಚಿಂತನೆಯನ್ನು ಮುನ್ನೆಲೆಗೆ ತಂದು ಜನರಲ್ಲಿ ವೈಚಾರಿಕತೆಯನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದ್ದ ಒಬ್ಬ ವೈದ್ಯ ಜಡ್ಡುಗಟ್ಟಿದ ಸಾಮಾಜಿಕ ಮನಃಸ್ಥಿತಿಯ ಯಥಾಸ್ಥಿತಿವಾದಿಗಳಿಗೆ ಸವಾಲಾಗಿದ್ದರು. ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸಬೇಕು, ದೇಶ ಸದೃಢವಾಗಬೇಕೆಂದು ಬಯಸಿದ ವ್ಯಕ್ತಿಯನ್ನು ಧಾರ್ಮಿಕ ಅಂಧಾನುಯಾಯಿ ಉಗ್ರಗಾಮಿಗಳು ಹೊಡೆದುರುಳಿಸಿದರು. ಇದು ಆರಂಭವೂ ಅಲ್ಲ; ಇದೇ ಕೊನೆಯೂ ಅಲ್ಲ. ಸಮಾಜ ಸುಧಾರಣೆಗೆ ಪ್ರಯತ್ನಿಸಿದ ಬುದ್ಧನಾದಿಯಾಗಿ, ಚಾರ್ವಾಕರು, ಸಾವಿರಾರು ಶರಣರು, ಫುಲೆ ದಂಪತಿಗಳು, ನಾರಾಯಣ ಗುರು, ವಿವೇಕಾನಂದರು, ರಾಜಾರಾಮ ಮೋಹನರಾಯ, ಶಾಹು ಮಹಾರಾಜ, ಶಿವಾಜಿ ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್, ಅಂಬೇಡ್ಕರ್ ಮುಂತಾದ ಸಮಾಜ ಸುಧಾರಕರನ್ನು ಅಸಹನೆಯಿಂದಲೇ ಕಾಣಲಾಗಿತ್ತು. ಮೇಲಾಗಿ ಇವರನ್ನು ಹತ್ಯೆಗೈಯುವ ಪ್ರಯತ್ನಗಳೂ ಆಗಿವೆ. ಹತ್ಯೆಯ ಪ್ರಯತ್ನಗಳಲ್ಲಿ ಸಂಚುಕೋರ ರಾಷ್ಟ್ರದ್ರೋಹಿಗಳ ಕೈ ಮೇಲಾಗಿದೆ. ಡಾ. ನರೇಂದ್ರ ದಾಬೋಲ್ಕರ್ ಅಲ್ಲದೇ ಸಮಚಿಂತನೆಯ ವಿಚಾರವಾದಿಗಳಾಗಿದ್ದ ಗೋವಿಂದ ಪಾನ್ಸಾರೆ, ಡಾ.ಎಂ.ಎಂ.ಕಲಬುರಗಿ, ಗೌರಿ ಲಂಕೇಶ ಮುಂತಾದವರು ಈ ವಿಕೃತಿಗೆ ಬಲಿಯಾಗಿದ್ದಾರೆ. ಪ್ರೊ.ಭಗವಾನ್, ಯೋಗೇಶ ಮಾಸ್ಟರ್, ಆನಂದ ತೇಲ್ತುಂಬ್ಡೆ, ಇತ್ತೀಚೆಗೆ ನಿಧನರಾದ ಪ್ರೊ.ಮಹೇಶಚಂದ್ರ ಗುರು, ಸ್ಟ್ಯಾನ್ ಸ್ವಾಮಿ ಅವರಂಥ ವಿಚಾರವಾದಿಗಳು ಧರ್ಮಾಂಧರಿಂದ ಅನೇಕ ಸಂಕಷ್ಟಗಳನ್ನು ಎದುರಿಸಿದ್ದಾರೆ. ಇವರ ಹತ್ಯೆಗೆ ಕಾರಣವೇನು ಎಂದು ಅವಲೋಕಿಸಿದಾಗ  ತಮ್ಮ ಸುತ್ತಲಿನ ಜನರ ಏಳಿಗೆಗಾಗಿ ಸಮಸಮಾಜದ ಕನಸು ಹೊತ್ತು ಬೆಳಕೀವ ಸೂರ್ಯನಂತಾದವರು. ಇವರ‌್ಯಾರೂ ರಾಷ್ಟ್ರೀಯತೆ, ಏಕತೆ, ಆಡಳಿತ, ಜನಸಮುದಾಯ, ಸಂವಿಧಾನಕ್ಕೆ ಸಣ್ಣ ಅಪಚಾರವನ್ನೂ ಎಸಗಿರಲಿಲ್ಲ. ಈ ಹತ್ಯೆಗಳು ನ್ಯಾಯಯುತವೇ ? ಧಾರ್ಮಿಕ ಉಗ್ರಗಾಮಿಗಳು ಈ ಹತ್ಯೆಗಳನ್ನು ಜನಮಾನಸದಿಂದ ಅಳಿಸಿಹಾಕುವ ಮತ್ತು ಇಂಥ ಇನ್ನಷ್ಟು ಹತ್ಯೆಗಳಿಗೆ ಪ್ರಚೋದನೆ ನೀಡುವ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇಂಥಾ ಪ್ರಯತ್ನಗಳಿಗೂ ಒಂದು ಇತಿಹಾಸವೇ ಇದೆ ಎಂಬುದು ನಾಚಿಕೆಗೇಡಿನ ಸಂಗತಿ. ಭಾರತದ ಸತ್ಪ್ರಜೆಗಳಾದ ಎಲ್ಲರೂ ಇದನ್ನು ಖಂಡಿಸಬೇಕು.


‘ಅಖಿಲ ಭಾರತ ಜನ ವಿಜ್ಞಾನ ಜಾಲ’ವು(AIPSN) ಈ ಹತ್ಯೆಗಳನ್ನು ಖಂಡಿಸುತ್ತ, ಅವರೆಲ್ಲರೂ ಪ್ರತಿಪಾದಿಸಿದ ವಿಚಾರಗಳನ್ನು ಮುನ್ನೆಲೆಗೆ ತಂದು ‘ವ್ಯಕ್ತಿಗಳನ್ನು ಕೊಲ್ಲಬಹುದು; ವಿಚಾರಗಳನ್ನಲ್ಲ’ ಎಂಬ ಸಂದೇಶವನ್ನು ಕೊಡಬಯಸುತ್ತದೆ. ಜನವಿಜ್ಞಾನ ಚಳುವಳಿಯ ಎಲ್ಲಾ ಸೋದರ ಸಂಘಟನೆಗಳು ಮತ್ತು ಡಾ.ನರೇಂದ್ರ ದಾಬೋಲ್ಕರ್ ಅವರು ಮಹಾರಾಷ್ಟ್ರದಲ್ಲಿ ಸ್ಥಾಪಿಸಿದ್ದ ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ’ಗಳು ಒಟ್ಟಾಗಿ 2018ರಿಂದ ಪ್ರತಿ ವರ್ಷ ಆಗಷ್ಟ 20 ನ್ನು ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನವೆಂದು ನಿರ್ಧರಿಸಿ ದೇಶದಾದ್ಯಂತ ಆಚರಿಸಲಾಗುತ್ತಿದೆ. ಇದು ಪುರಾವೆ ಆಧಾರಿತ ತಾರ್ಕಿಕ ಚಿಂತನೆ ಮತ್ತು ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕತೆ, ವೈಚಾರಿಕತೆ, ವೈಜ್ಞಾನಿಕ ಮನೋಭಾವವನ್ನು ಪಸರಿಸಿ ಜನಜೀವನವನ್ನು ಮತ್ತಷ್ಟು ಉತ್ತಮಪಡಿಸಲು ಸಾಮಾಜಿಕ-ರಾಜಕೀಯ ಚಳುವಳಿಗಳ ಬೆಳಕಿನಲ್ಲಿ ಮುನ್ನಡೆಯುವ ದಿನವಾಗಿದೆ. ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಮುಖ್ಯವಾಗಿ ಮೂರು ಉಪಕ್ರಮಗಳಿವೆ. ಸರ್ಕಾರದ ಪಾತ್ರ, ವೈಜ್ಞಾನಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿಗಳು ಮತ್ತು ಶೈಕ್ಷಣಿಕ ಸ್ವಾತಂತ್ರ್ಯದ ಸವೆತ ಮತ್ತು ಹುಸಿ ವಿಜ್ಞಾನದ ಪ್ರಸರಣವನ್ನು ಎದುರಿಸುವ ಅಗತ್ಯತೆ. ಇದು ವಿಜ್ಞಾನಿಗಳು, ಬುದ್ಧಿಜೀವಿಗಳು ಮತ್ತು ವಕೀಲರನ್ನು ಪುರಾವೆ ಆಧಾರಿತ ಚಿಂತನೆಯನ್ನು ಉತ್ತೇಜಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಕರೆ ನೀಡುತ್ತದೆ. ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುತ್ತದೆ. ಭಾರತದ ಸಂವಿಧಾನದ ವಿಧಿ 51A(h)ವು ಭಾರತದ ಪ್ರತಿ ನಾಗರಿಕರು ವೈಜ್ಞಾನಿಕ ಮನೋಭಾವ, ಮಾನವತಾವಾದ, ಜಿಜ್ಞಾಸೆ (ವೈಚಾರಿಕತೆ, ಪ್ರಶ್ನಿಸುವಿಕೆ, ತರ್ಕ) ಮತ್ತು ಸುಧಾರಣಾವಾದವನ್ನು(ಪ್ರಗತಿಪರತೆ) ಬೆಳೆಸಿಕೊಳ್ಳಬೇಕೆಂದು ಹೇಳಿದೆ. ರಾಜಕೀಯ, ವಿಜ್ಞಾನ, ಸಮಾಜ, ವೈದ್ಯಕೀಯ, ಶಿಕ್ಷಣ, ಸಾರ್ವಜನಿಕ ವ್ಯವಸ್ಥೆ, ಇತಿಹಾಸ ಮುಂತಾದ ಕ್ಷೇತ್ರಗಳಲ್ಲಿನ ಧಾರ್ಮಿಕ ಮತಾಂಧರ ಅತಿಕ್ರಮಣವನ್ನು ಕಿತ್ತೆಸೆದು ವೈಜ್ಞಾನಿಕ ಮನೋಭಾವವನ್ನು ಸ್ಥಾಪಿಸುವ ಪ್ರಯತ್ನಗಳಾಗಬೇಕಿವೆ.


ಶರಣ ನುಲಿಯ ಚಂದಯ್ಯನವರ ಜಯಂತಿ, ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿಯವರ ಜನ್ಮದಿನ, ಸ್ವಾಭಿಮಾನಿ ಚಳುವಳಿಯ ಹರಿಕಾರರಾದ ನಾರಾಯಣ ಗುರುಗಳ ದೇಹಾಂತ್ಯವಾದ ದಿನ, ಡಾ. ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲದೇ ಡಾ.ಎಂ.ಎಂ. ಕಲಬುರಗಿ, ಗೌರಿ ಲಂಕೇಶ ಮುಂತಾದ ತರ್ಕಬದ್ಧ ಚಿಂತನೆಯ ಪ್ರತಿಪಾದಕರು ಹತ್ಯೆಯಾದ ದಿನಗಳು ಒಟ್ಟೊಟ್ಟಿಗೇ ಇವೆ. ದ್ವೇಷ ಅಸಹಿಷ್ಣುತೆಗೆ ಬಲಿಯಾದ ರಾಜೀವ್ ಗಾಂಧಿಯವರ ಸ್ಮರಣೆಯನ್ನು ರಾಷ್ಟ್ರೀಯ ಸದ್ಭಾವನಾ ದಿನವೆಂದು ಆಚರಿಸುತ್ತ ಬರಲಾಗಿದೆ.  ಸದ್ಭಾವನೆ ಎಂಬ ಪದಕ್ಕಾದರೂ ಅರ್ಥ ಬರಬೇಕೆಂದರೆ ನಿಜ ಅರ್ಥದ ಸದ್ಭಾವನೆ, ಸ್ವಾತಂತ್ರ್ಯ, ಸಹೋದರತೆಯನ್ನು ಮೈಗೂಡಿಸಿಕೊಂಡು ವಿಶ್ವಮಾನವರಾಗಬೇಕು. ಎಲ್ಲಾ ರೀತಿಯ ಅಸಮಾನತೆಗಳು, ತಾರತಮ್ಯ, ಅಸಹಿಷ್ಣುತೆ, ಪ್ರತ್ಯೇಕತೆಗಳನ್ನು ಖಂಡಿಸಿ ಐಕ್ಯತೆಯನ್ನು ಸಾರಬೇಕು. ಆಳುವ ಸರಕಾರಗಳು ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳನ್ನು ಆದ್ಯತೆಯಾಗಿ ಪರಿಗಣಿಸಿ ಹೆಚ್ಚಿನ ಅನುದಾನ ನೀಡಿ ಪೋಷಿಸಬೇಕು. ಶಿಕ್ಷಣದಿಂದಲೇ ಪ್ರಗತಿ ಸಾಧ್ಯ. ಪರಿಸರ ವಿದ್ವಂಸಕ ಅಭಿವೃದ್ಧಿ ಮಾದರಿಯನ್ನು ಕೈಬಿಟ್ಟು, ಪರಿಸರ ಪೂರಕ ಸುಸ್ಥಿರ ಅಭಿವೃದ್ಧಿಯನ್ನು ಯೋಜಿಸಬೇಕು. ಧಾರ್ಮಿಕ ರಾಜಕಾರಣವನ್ನು ಕಳಚಿ ಅಭಿವೃದ್ಧಿ ರಾಜಕಾರಣವನ್ನು ಮೈಗೂಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು ಸಂವಿಧಾನಕ್ಕೆ ಬದ್ಧರಾಗಿರಬೇಕು. ಭಾರತದಲ್ಲಿ ಬಂಗಾಳವನ್ನೊಳಗೊಂಡು ಇಡೀಯ ದಕ್ಷಿಣ ಭಾರತವು ವೈಚಾರಿಕತೆಯ ಗಾಳಿ ಬೀಸಿದ ಪ್ರದೇಶ. ಬಹುತೇಕ ವಿಚಾರವಾದಿಗಳು, ಪ್ರಗತಿಪರರು ಜೀವ ಸವೆಸಿದ ನೆಲವಿದು. ಇಲ್ಲಿನ ಮಣ್ಣಿನಲ್ಲೇ ಆ ಗುಣ ಬೆರೆತಿದೆ. ಆಗಷ್ಟ ೨೦ ರಂದು ಡಾ.ನರೇಂದ್ರ ದಾಬೋಲ್ಕರ್ ಹತ್ಯೆ-ಆಗಷ್ಟ ೩೦ ರಂದು ಡಾ.ಎಂ.ಎಂ.ಕಲಬುರಗಿಯವರ ಹತ್ಯೆಯ ನಡುವಿನ ಹತ್ತು ದಿನಗಳ ಕಾಲ ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮಗಳ ಮೂಲಕ ಇವರೆಲ್ಲರ ವಿಚಾರಗಳನ್ನು ಮೈಗೂಡಿಸಿಕೊಳ್ಳುತ್ತ ಸದೃಢ ಭಾರತವನ್ನು ಕಟ್ಟೋಣ. ಧರ್ಮದ ನಶೆಯೇರಿಸಿಕೊಂಡ ಅಂಧಾನುಯಾಯಿಗಳಲ್ಲಿ ಪ್ರಗತಿಪರತೆ, ವೈಚಾರಿಕತೆ, ವೈಜ್ಞಾನಿಕ ಮನೋಭಾವಗಳನ್ನು ಮೂಡಿಸುವ ಪ್ರಯತ್ನ ಮಾಡಬೇಕಿದೆ. 'ವ್ಯಕ್ತಿಗಳ ಸಾವು ಅಂತಿಮವಲ್ಲ, ವಿಚಾರಗಳೇ ಅಂತಿಮ; ವಿಚಾರಗಳಿಗೆ ಸಾವಿಲ್ಲ' ಎಂಬುದನ್ನು ಸಾರುತ್ತ ಪ್ರಗತಿಪರತೆಯ ನೊಗವನ್ನು ಹೊತ್ತು ಸಾಗೋಣ.

Monday, January 15, 2024

 ಸಂಕ್ರಾಂತಿ


        ಈಗ ಎಲ್ಲೆಡೆಯೂ ಸಂಕ್ರಾಂತಿಯ ಸಂಭ್ರಮ. ಇದು ಭಾರತೀಯರು ಪರಂಪರೆಯಿಂದಲೂ ಆಚರಿಸಿಕೊಂಡು ಬಂದಿರುವ ಒಂದು ಸೌರಮಾನ ಹಬ್ಬ. ದೇಶದ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳು, ವಿವಿಧ ಬಗೆಯ ಆಚರಣೆಗಳ ಮೂಲಕ ತನ್ನ ಅಸ್ತಿತ್ವವನ್ನು ಸಾರಿರುವ ಸಂಕ್ರಾಂತಿಯನ್ನು ನಾವು ಹೇಗೆಲ್ಲಾ ಆಚರಿಸಬೇಕು ಎಂಬ ಜಿಜ್ಞಾಸೆ ಹುಟ್ಟಿಕೊಳ್ಳುವುದು ಸಹಜ. ನಾವು ಆಚರಿಸುವ ಪ್ರತಿ ಹಬ್ಬಗಳು ಸಡಗರ, ಸಂಭ್ರಮ, ಶುಭ್ರತೆ, ಸಾಮಾಜಿಕ ಸಹಕಾರ, ಹೊಂದಾಣಿಕೆ, ಸಹಬಾಳ್ವೆ, ಸಹಜೀವನದ ಪ್ರತೀಕಗಳಾಗಿರುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಜನಪದರಿಂದ ಹುಟ್ಟಿಕೊಂಡ ಹಲವಾರು ಹಬ್ಬಗಳಲ್ಲಿ ವೈಜ್ಞಾನಿಕತೆಯೂ ಮೇಳೈಸಿದೆ. ಧಾರ್ಮಿಕರಿಂದ ಹುಟ್ಟಿಕೊಂಡ ಅನೇಕ ಹಬ್ಬಗಳು ಕೇವಲ ಆಚರಣೆಗಳಿಂದ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಜನ ಜೀವನದೊಂದಿಗೆ ಬೆಸೆದುಕೊಂಡ ಹಬ್ಬಗಳು ಜನಜೀವನ ಬದಲಾದಂತೆ ತನ್ನೊಳಗಿನ ವೈಜ್ಞಾನಿಕತೆಯನ್ನು ಮರೆಮಾಚಿ, ಧಾರ್ಮಿಕ ಸ್ವರೂಪ ಪಡೆದುಕೊಂಡು ಕೇವಲ ಅನುಪಯುಕ್ತ ಆಚರಣೆಗಳ ಬೆನ್ನತ್ತಿ ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಹಬ್ಬಗಳ ನೈಜ ಆಚರಣೆಗಳು ಅದರ ಹಿಂದಿನ ವೈಜ್ಞಾನಿಕ ಹಿನ್ನೆಲೆಯನ್ನು ತಿಳಿಯಬಯಸುವ ನಮಗೆ ಅವುಗಳು ಬರುವ ಸನ್ನಿವೇಶಗಳಾದ ಕ್ಯಾಲೆಂಡರ್ ಕುರಿತು ತಿಳಿಯಬೇಕಾದ ಅನಿವಾರ್ಯತೆ ಇದೆ. 


    ಈಗ ನಾವು ಬಳಸುತ್ತಿರುವುದು ಗ್ರೇಗೋರಿಯನ್ ಕ್ಯಾಲೆಂಡರ್. ಚಾಂದ್ರಮಾನ ಹಾಗೂ ಸೌರಮಾನ ಕ್ಯಾಲೆಂಡರ್ ಪದ್ಧತಿಗಳೆರಡನ್ನೂ ಸಂಯೋಜಿಸಿ ಬಳಸುತ್ತಿದ್ದೇವೆ. ಒಂಥರಾ ಕಲಬೆರಕೆ..! ಎಲ್ಲವೂ ಗೊಂದಲಮಯ..! ಭಾರತೀಯರು ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಿರುವುದು ಚಾಂದ್ರಮಾನ ಕ್ಯಾಲೆಂಡರ್ ಪದ್ಧತಿಯನ್ನು. ಚಾಂದ್ರಮಾನ ಕ್ಯಾಲೆಂಡರ್ ಲೆಕ್ಕಾಚಾರ ನಕ್ಷತ್ರ ಮಂಡಲಗಳ ಆಧಾರದಲ್ಲಿ ನಿರ್ಧರಿತವಾಗುತ್ತದೆ. ಋತುಮಾನಗಳು, 12 ಮಾಸಗಳು, ಅಮಾವಾಸ್ಯೆಗಳು, ಹುಣ್ಣಿಮೆಗಳು, ಮಳೆಯ ನಕ್ಷತ್ರಗಳು, ಶುಕ್ಲಪಕ್ಷ, ಕೃಷ್ಣಪಕ್ಷ ಎಲ್ಲವೂ ಅನುಸರಿಸುವುದು ನಕ್ಷತ್ರ ಮಂಡಲ ಆಧಾರದ ಈ ಚಾಂದ್ರಮಾನ ಕ್ಯಾಲೆಂಡರ್ ಮೇಲೇ.. ನಕ್ಷತ್ರ ಮಂಡಲಗಳಲ್ಲಿ ಚಂದ್ರನ ಪರಿಭ್ರಮಣೆಯನ್ನು ಆಧರಿಸಿ 12 ತಿಂಗಳುಗಳ ಕಲ್ಪನೆಯಿಂದ ಹುಟ್ಟಿಕೊಂಡಿದ್ದೇ ಚಂದ್ರಮಾನ ಕ್ಯಾಲೆಂಡರ್. ಅಸಲಿಗೆ ತಿಂಗಳು ಎಂದರೆ ಬೇರೇನೂ ಅಲ್ಲ ಚಂದ್ರ ಎಂದೇ ಅರ್ಥ. ತಿಂಗಳ ಬೆಳವಣಿಗೆಯೇ ಶುಕ್ಲಪಕ್ಷ, ತಿಂಗಳ ಕ್ಷೀಣಿಸುವಿಕೆಯೇ ಕೃಷ್ಣಪಕ್ಷ. ಚಂದ್ರಮಾನ ಮಾಸಗಳು ಚೈತ್ರ, ವೈಶಾಖ, ಜೇಷ್ಠ, ಆಶಾಢ, ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ ಮತ್ತು ಪಾಲ್ಗುಣ. ಇದು ಈ ನೆಲದ ನಿಜವಾದ ಕ್ಯಾಲೆಂಡರ್. ರಾಮ-ಕೃಷ್ಣರ ಹುಟ್ಟು, ರಾಮಾಯಣ-ಮಹಾಭಾರತಗಳಲ್ಲಿ ಉಲ್ಲೇಖಿಸಿದ ದಿನಗಣನೆ, ಬೌದ್ಧ ಹಬ್ಬಗಳು, ಜೈನ ಹಬ್ಬಗಳು, ಭಾರತದಲ್ಲಿ ಆಚರಿಸಲ್ಪಡುವ ಇತರ ಹಬ್ಬ-ಹರಿದಿನಗಳೆಲ್ಲವೂ ಇರುವುದು ಚಾಂದ್ರಮಾನ ಕ್ಯಾಲೆಂಡರ್ ಅನುಸರಿಸಿಯೇ. ಪಂಚಾಂಗ, ಜ್ಯೋತೀಷ್ಯಗಳು ಚಾಂದ್ರಮಾನ ಕ್ಯಾಲೆಂಡರ್ ಅನುಸರಿಸುವುದಿಲ್ಲ. ಅವು ಹೊಟ್ಟೆಹೊರೆಯಲು ಹುಟ್ಟಿಕೊಂಡವುಗಳು.


    ಇನ್ನು ಸೌರಮಾನದ ಕುರಿತು ತಿಳಿಯೋಣ. ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನಾಧರಿಸಿದ ಕಲ್ಪನೆಯಿಂದ ಹುಟ್ಟಿಕೊಂಡಿದ್ದೇ ಸೌರಮಾನ ಕ್ಯಾಲೆಂಡರ್. ಸೌರಮಾನದಲ್ಲೂ 12 ಮಾಸಗಳಿವೆ-ರಾಶಿಗಳೆಂದೇ ಗುರುತಿಸಲಾದ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಇದು ಗ್ರೀಕರಿಂದ ಭಾರತಕ್ಕೆ ಬಂದಿದ್ದು ಎಂದು ಎಲ್ಲೋ ಓದಿದ ನೆನಪು. ಇದರೊಂದಿಗೆ ಜ್ಯೋತೀಷ್ಯ, ಪಂಚಾಂಗ, ಗ್ರಹಗತಿ, ವಾಸ್ತು ಮುಂತಾದವುಗಳ ಗುಚ್ಛ ಭಾರತವನ್ನು ಸೇರಿ ಇಲ್ಲಿನ ಜನಜೀವನವನ್ನು ಅಲ್ಲೋಲಕಲ್ಲೋಲ ಮಾಡಿರುವುದಂತೂ ಸುಳ್ಳಲ್ಲ. ಸೌರಮಾನದ ಪ್ರಕಾರ ವರ್ಷದಲ್ಲಿ ನಾಲ್ಕು ಸಂಕ್ರಾಂತಿಗಳಿರುತ್ತವೆ. 'ವಸಂತ ಸಂಕ್ರಾಂತಿ' ಮತ್ತು 'ಶರತ್ ಸಂಕ್ರಾಂತಿ' ಎಂಬ ಎರಡು ವಿಷುವತ್ ಸಂಕ್ರಾಂತಿಗಳು. ಇವೆರಡೂ 'ಇಕ್ವಿನಾಕ್ಸ್' ಗಳು ಅಂದರೆ ಹಗಲು ಮತ್ತು ರಾತ್ರಿಗಳು ಸಮವಾಗಿರುವ ವರ್ಷದ ಕೇವಲ ಎರಡು ದಿನಗಳು. ಅಲ್ಲದೆ ಈ ದಿನಗಳಂದು ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಪೂರ್ವ ಮತ್ತು ಪಶ್ಚಿಮ ದಿಕ್ಕುಗಳ ನೇರ ರೇಖೆಯಲ್ಲಿ ಇರುತ್ತವೆ. 'ಕರ್ಕಾಟಕ ಸಂಕ್ರಾಂತಿ' ಮತ್ತು 'ಮಕರ ಸಂಕ್ರಾಂತಿ' ಎಂಬ ಎರಡು ಅಯನ ಸಂಕ್ರಾಂತಿಗಳು ಇರುತ್ತವೆ. ಇವು ವರ್ಷದ ಸುಧೀರ್ಘ ಹಗಲು ಮತ್ತು ರಾತ್ರಿಗಳನ್ನು ಒಳಗೊಂಡ ದಿನಗಳು. ಇವುಗಳನ್ನು ಬೇಸಿಗೆಯ ಸಂಕ್ರಾಂತಿ ಮತ್ತು ಚಳಿಗಾಲದ ಸಂಕ್ರಾಂತಿ ಎಂದು ಕರೆಯುತ್ತಾರೆ. ವಿಶೇಷವಾಗಿ ಈ ಅಯನ ಸಂಕ್ರಾಂತಿಗಳಂದು ಸೂರ್ಯ ತನ್ನ ಚಲನೆಯ ದಿಕ್ಕನ್ನು ಬದಲಿಸುತ್ತಾನೆ.


    ಈಗ ನಾವು ಆಚರಿಸುತ್ತಿರುವ ಸಂಕ್ರಾಂತಿ ಯಾವ ಕ್ಯಾಲೆಂಡರ್ ನ ಅನುಸರಣೆ ಮತ್ತು ಯಾವ ಹಿನ್ನೆಲೆಯದ್ದು ಎಂದು ನಿಮಗೆ ಸ್ಪಷ್ಟವಾಗಿರಬಹುದು. ನಿಮ್ಮ ಊಹೆಯಂತೆ ಇದು ಸೌರಮಾನ ಕ್ಯಾಲೆಂಡರ್‌ನ ಪ್ರಮುಖ ದಿನ 'ಉತ್ತರಾಯಣ ಸಂಕ್ರಾಂತಿ'. ದಕ್ಷಿಣ ಪಥದಲ್ಲಿದ್ದ ಸೂರ್ಯ ಇಲ್ಲಿಂದಲೇ ಉತ್ತರದ ಕಡೆಗೆ ಸರಿಯಲು ಆರಂಭಿಸುತ್ತಾನೆ. ಉತ್ತರದ ಅಂಚಿಗೆ ತಲುಪಲು ಆರು ತಿಂಗಳು ಬೇಕು. ಮತ್ತೆ ಜೂನ್ ೨೧ ರಂದು ಉತ್ತರದ ತುದಿಯಿಂದ ದಕ್ಷಿಣದ ಕಡೆಗೆ ಪಯಣ ಆರಂಭಿಸುತ್ತಾನೆ; ಹೀಗೇ ನಿರಂತರವಾಗಿ ಸಾಗುತ್ತದೆ. (ಸೂರ್ಯಕೇಂದ್ರ ಸಿದ್ಧಾಂತದಲ್ಲಿ ಸೂರ್ಯನಿಗೆ ಭ್ರಮಣೆಯಿಲ್ಲ, ಸೂರ್ಯನ ಸುತ್ತ ಭೂಮಿ ಸುತ್ತುವುದರಿಂದ ಈ ಎಲ್ಲಾ ಬದಲಾವಣೆಗಳು ಸಂಭವಿಸುತ್ತವೆ. ಓದಿನ ಸರಳತೆಗಾಗಿಯಷ್ಟೇ ಸೂರ್ಯ ಚಲಿಸುತ್ತಾನೆ ಎಂದು ಹೇಳುತ್ತಿದ್ದೇನಷ್ಟೇ.) 


ಈಗ ಮರಳಿ ಸಂಕ್ರಾಂತಿಯ ವಿಷಯಕ್ಕೆ ಬರೋಣ.

    ಯಾವುದೇ ಧಾರ್ಮಿಕ ಹಿನ್ನೆಲೆ ಇಲ್ಲದ ಶುದ್ಧ ವೈಜ್ಞಾನಿಕ ಹಬ್ಬ ಈ ಸಂಕ್ರಾಂತಿ. ಭೂಮಿಯ ಚಲನೆಯಿಂದ ಉಂಟಾಗುವ, ಹವಾಮಾನ ಬದಲಾವಣೆಯ ಪರ್ವ - ಸಂಕ್ರಾಂತಿ.  ಅಸಲಿಗೆ ಡಿಸೆಂಬರ್ 22 ರಂದು ಉತ್ತರಾಯಣ ಸಂಕ್ರಾಂತಿಯು ಶುರುವಾಗುತ್ತದೆ. ಆದರೆ ಸೌರಮಾನ ಪಂಚಾಂಗವನ್ನು ಅನುಸರಿಸುವ ಆರ್ಯರು ಇದನ್ನು ತಮ್ಮ ನಂಬಿಕೆಯಂತೆ ಉತ್ತರಾಯಣದ ಮಕರ ರಾಶಿಯಲ್ಲಿರುವ ಪುಣ್ಯಕಾಲ ಅಂದರೆ ಜನವರಿ 14 ಅಥವಾ 15 ರಂದು ಆಚರಿಸುತ್ತಾರೆ. 


    ಮೈ ಕೊರೆಯುವ ಚಳಿಯನ್ನು ಹೊತ್ತು ತರುವ ಹೇಮಂತ ಋತುವಿನ ಪುಷ್ಯ ಮಾಸದಲ್ಲಿ ವಿಪರೀತ ಚಳಿಯಿಂದ ದೇಹವನ್ನು ರಕ್ಷಿಸಲು ಮೈಯಲ್ಲಿರುವ ಕೊಬ್ಬಿನಂಶವೂ ಕರಗಿ ಹೋಗುತ್ತದೆ. ಚರ್ಮವು ಬೆಳ್ಳಗೆ ಒಡೆದುಕೊಳ್ಳುತ್ತದೆ. ಕೊರೆವ ಚಳಿಗೆ ಚರ್ಮದ ಜೀವಕೋಶಗಳು ನಶಿಸಿ, ಉದುರಿ ಬೀಳತೊಡಗುತ್ತದೆ. ಕೀಲುಗಳು, ಮೂಳೆಗಳ ನಡುವಿನ ಸಂದುಗಳು ಬಿಗಿದುಕೊಳ್ಳುತ್ತವೆ. ಹೆಚ್ಚಿನ ಮೂತ್ರ ವಿಸರ್ಜನೆಯಿಂದ ಮೈಯಲ್ಲಿರುವ ಲವಣಾಂಶವು ಖಾಲಿಯಾಗಿ ದೇಹವು ನಿಸ್ತೇಜವಾಗುತ್ತದೆ. ಇದೇ ಸಂದರ್ಭದಲ್ಲಿ ಆಗಸದಲ್ಲಿ ಮೋಡಗಳು ಆವರಿಸಿಕೊಂಡು ಸೂರ್ಯನ ಬಿಸಿಲೂ ಕಡಿಮೆಯಾಗಿರುತ್ತದೆ. ಕೃಷಿ ಚಟುವಟಿಕೆಗಳು ಈ ಸಂದರ್ಭದಲ್ಲಿ ಅಧಿಕವಾಗಿದ್ದು ಕಾಕತಾಳೀಯವೆಂಬಂತೆ ಹಗಲು ಕಡಿಮೆಯಾಗಿದ್ದು, ರಾತ್ರಿಗಳು ಅಧಿಕವಾಗಿರುವುದರಿಂದ ದೇಹವು ಹೆಚ್ಚು ವಿಶ್ರಾಂತಿಯನ್ನು ಬಯಸುತ್ತದೆ. 


    ಕಳಾಹೀನವಾದ ದೇಹಕ್ಕೆ ತೇಜಸ್ಸನ್ನು ನೀಡಲು ಎಳ್ಳಿನಂಥ ಎಣ್ಣೆ ಪದಾರ್ಥದ ಸೇವನೆ ಅವಶ್ಯಕ. ಇದರೊಂದಿಗೆ ವಿಫುಲ ಖನಿಜಾಂಶವಿರುವ ಬೆಲ್ಲವೂ ಬೆರೆತರೆ ದೇಹಕ್ಕೆ ಉತ್ತಮ ಪೋಷಣೆ ದೊರೆಯುತ್ತದೆ.. ಎಣ್ಣೆಯಂಶವಿರುವ ಕಾಳುಗಳು, ಖನಿಜಾಂಶವಿರುವ ಹಣ್ಣುಗಳು, ಕಾಳುಗಳ ತಿನಿಸು, ತರಕಾರಿ ಮುಂತಾದವುಗಳ ಸೇವನೆ ಈ ಸಂದರ್ಭದ ಅಗತ್ಯತೆ. ಈ ಸುಗ್ಗಿಯ ಕಾಲದಲ್ಲಿ ರೈತಾಪಿ ವರ್ಗ ಹೊಸ ಬೆಳೆಯನ್ನು ಮನೆಗೆ ತಂದು ತನ್ನೊಡನಾಡಿಗಳಿಗೂ ಹಂಚಿ ಅವುಗಳಿಂದ ಮಾಡಿದ ಅಡುಗೆಯನ್ನು ಉಣ್ಣುವ ಮೊದಲ ಹಬ್ಬವಿದು. ಈ ನೆಲದ ಉತ್ಪನ್ನಗಳಾದ  ಕಾಳುಗಳು, ಹಣ್ಣುಗಳು, ತರಕಾರಿಗಳು ಆಯಾ ಋತುಮಾನದಲ್ಲಿ ಒದಗಿ ಬರುತ್ತವೆ. ಅವುಗಳಿಗೆ ಅದರದೇ ಆದ ಮಹತ್ವವಿದೆ. 'ಎಳ್ಳು-ಬೆಲ್ಲ ತಿನ್ನೋಣ, ಒಳ್ಳೆ ಮಾತ್ ಆಡೋಣ' ಎಂದು ಎಲ್ಲರೂ ಪರಸ್ಪರ ಎಳ್ಳು-ಬೆಲ್ಲ ಹಂಚಿಕೊಂಡು ತಿನ್ನುವುದು ಈ ಹಬ್ಬದ ರೂಢಿ. ನೆರೆಹೊರೆಯವರು ಕೂಡಿ ಬಾಳಬೇಕೆಂಬ ಸೋದರತ್ವ, ಹಂಚಿ ತಿನ್ನಬೇಕೆಂಬ ಸಹಬಾಳ್ವೆ, ದ್ವೇಷ ಮರೆತು, ಪ್ರೀತಿ ಹಂಚುವ ಸಾಮರಸ್ಯಗಳೇ ಈ ಹಬ್ಬದ ತತ್ವ. ಇಲ್ಲೆಲ್ಲೂ ಧಾರ್ಮಿಕತೆಯಿಲ್ಲ.


    ಧಾರ್ಮಿಕ ಕಂದಾಚಾರಿಗಳಿಗೆ ಕಾಲು ಚಾಚಲು ಜಾಗ ಸಿಕ್ಕರೆ ಸಾಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಂದಾಚಾರಗಳನ್ನು ಹೇರಿಬಿಡುತ್ತಾರೆ. ಪರದುಡಿಮೆಯನ್ನೆ ನಂಬಿ ಬದುಕುವ ಸೋಮಾರಿ ವರ್ಗ ಎಳ್ಳು-ಬೆಲ್ಲವನ್ನೆಲ್ಲಿಂದ ತಿನ್ನಬೇಕು? ಅದಕ್ಕೊಂದು ಹೊಸ ಉಪಾಯ 'ಎಳ್ಳು-ಬೆಲ್ಲವನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ-ಎಂದು ಮುಗ್ದ ಜನರನ್ನು ನಂಬಿಸುವುದು.' ಪುಣ್ಯಕಾಲದ ದಾನ ಶ್ರೇಷ್ಠ-ದಾನಿಗೆ ಪುಣ್ಯ; ಪಡೆದವರಿಗೆ? ಇಂಥ ಬಹುತೇಕ ಸುಳ್ಳುಗಳು ಢಾಳಾಗಿ ಗೋಚರಿಸುತ್ತವೆ. ಆದರೆ ಇದನ್ನು ಮೀರಿದ ಮಾನವೀಯತೆ ಈ ನೆಲದಲ್ಲಿದೆ-ಸಹಜೀವನ-ಇಲ್ಲದವರೊಂದಿಗೆ ಇದ್ದವರು ಹಂಚಿ ತಿನ್ನಬೇಕೆಂಬ ಮನುಷ್ಯತ್ವವನ್ನೇ ವಚನಕಾರರಾದಿಯಾಗಿ ಎಲ್ಲಾ ಸುಧಾರಣಾವಾದಿಗಳೂ ಸಾರುತ್ತ ಬಂದಿರುವುದು. ಅದರೊಂದಿಗೆ ಕಪಟತನವ ಅರಿಯುವ 'ಅರಿವನ್ನೂ' ನೀಡಿದರು. ನಮ್ಮರಿವನ್ನೇ 'ಅರಿ'ಯ ಅಡಿಗಿಟ್ಟು ಅರಿವುಗೇಡಿಗಳಾಗಿ ಕಂದಾಚಾರದ ಹಬ್ಬ ಆಚರಿಸುವದನ್ನು ತಪ್ಪಿಸಿ ಹಬ್ಬದ ಹಿನ್ನೆಲೆ, ವೈಜ್ಞಾನಿಕತೆಯನ್ನು ಅರಿತು ಸಂಭ್ರಮ-ಸಡಗರದಿಂದ ಆಚರಿಸಿದರೆ ಅದಕ್ಕೊಂದು ಅರ್ಥ.


    ಈ ನೆಲದ ಗುಣ ಸಾರುವ ಯುಗಾದಿ, ದೀಪಾವಳಿ, ನಾಗರ ಪಂಚಮಿ, ದಸರಾ, ಎಳ್ಳಮವಾಸೆ, ಮಣ್ಣೆತ್ತಿನಮವಾಸೆ ಮುಂತಾದವುಗಳ ಹಿನ್ನೆಲೆ, ಉಪಯುಕ್ತತೆಯನ್ನರಿತು ಆಚರಿಸಬೇಕು. ಹಬ್ಬ ಯಾವುದಾದರೂ ಆಗಲಿ ನಾವಿರುವ ಪರಿಸರ, ಪ್ರಾಣಿ-ಪಕ್ಷಿ, ವಿವಿಧ ಸಮುದಾಯಗಳು, ಹೀಗೆ ಬೇರೆ ಯಾರಿಗೂ ತೊಂದರೆಯಾಗದೇ ಎಲ್ಲರೂ ಸಂಭ್ರಮಿಸುವಂತೆ 'ಸರ್ವೇಜನಾಃ ಸುಖೀನೋಭವಂತು' ಎನ್ನುವಂತಿದ್ದರೆ ಅದನ್ನು ಆಚರಿಸುವಂತಾಗಲಿ. ಆದರೆ...

ಹಬ್ಬಗಳು 'ಕ್ರೌರ್ಯ-ಶೌರ್ಯದ ಪ್ರತೀಕವಾಗಬಾರದು, ಹಿಂಸೆ-ವಿಜಯಗಳ ಸ್ಮರಣೆಯಾಗಬಾರದು, ಮೋಸ-ಕಪಟತನಗಳ ಮಾರುಕಟ್ಟೆಯಾಗಬಾರದು, ಅಹಂಕಾರ-ಆಡಂಬರದ ಆಚರಣೆಗಳಾಗಬಾರದು;' ಹಬ್ಬಗಳು ಜನಪದರ ಜೀವಸೆಲೆ. ಅಲ್ಲಿ ಸೋದರತೆಯಿರಬೇಕು, ಸಹಜೀವನ ಸೌಂದರ್ಯವಿರಬೇಕು, ಸಾಮಾಜಿಕ ಬದ್ಧತೆಯಿರಬೇಕು, ಸಾಮರಸ್ಯವಿರಲೇಬೇಕು.